: ಸಖ್ಯಮೇಧ: ಗುರು

November 23, 2015

ಗುರು

ಮೊರೆವ ತೊರೆಯರೆದೂರ ಸಾರಲು- 
ತೊರೆದು ನೊರೆಹೊರೆಯೊಡಲ ಕಡಲು 
ಮರಳಿ ಸೇರಿತು ತನ್ನ ಗೂಡಿಗೆ; 
ನೀ- ತೆರಳುವೆಂದಿಗೆ ಗುರುವಿನಡಿಗೆ?
.
ನೀಲಬಾನಲಿ ತೇಲುಮುಗಿಲದು 
ಸಾಲುಸಾಲಿನ ಮಳೆಯ ಸುರಿಸಿ;
ಜಲವು ಸೇರಿತು ಮತ್ತೆ ಅಲ್ಲಿಗೆ; ನೀ-
ಅಲೆಯುವೆಂದಿಗೆ ಗುರುವ ನೆಲೆಗೆ?
.
ಬಾಗು ಚಂದ್ರನು, ಕೆಂಪು ಸೂರ್ಯನು
ಸಾಗಿ ಬಂದಿಹ ದಾರಿ ಕಾಣದೆ
ಮಗುಚಿ ಹೋದರೂ ರಾಶಿ ನೀರಲಿ; ನೀ-
ಹೋಗದಿರು ಗುರುವಿರದ ಊರಲಿ!
.
ಹಣತೆ ಉರಿಯಲು, ಗುರಿಯು ಗುರುವಿನ
ಅಣತಿ ಪಡೆಯುತ ಮೆರೆದು ಗೆಲ್ಲಲಿ!
ಕಣಕಣವೂ ಗುರುವೆಂಬ ಶಿಲ್ಪಿಯ
ಚಾಣದೇಟಲಿ ಮೀಯಲಿ !!
.
. . . ಕವನತನಯ ಸಖ್ಯಮೇಧ

No comments :

Post a Comment